ಕಿಶೋರ್ ದ್ವಿಭಾಷಾ ಚಿತ್ರ

  • IndiaGlitz, [Friday,June 27 2014]

ಶ್ರೀಚರಂತ್ ಫಿಲಂಸ್ ಲಾಂಛನದಲ್ಲಿ ಡಿ.ಸಿ.ಪ್ರಸನ್ನಕುಮಾರ್ ದೊಡ್ಡಬೇಲೆ ಅವರು ನಿರ್ಮಿಸುತ್ತಿರುವ ನೂತನ ಚಿತ್ರವೊಂದು ಜುಲೈನಲ್ಲಿ ಆರಂಭವಾಗಲಿದೆ. ಮುಖ್ಯಭೂಮಿಕೆಯಲ್ಲಿ ಕಿಶೋರ್ ಅಭಿನಯಿಸುತ್ತಿದ್ದಾರೆ. ಕ್ಷಣಕ್ಷಣಕ್ಕೂ ಕುತೂಹಲಕಾರಿಯಾಗಿರುವ ಈ ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಡೆಯಲಿದೆ. ಬೆಂಗಳೂರು ಹಾಗೂ ಕೇರಳದ ಮುನ್ನಾರ್ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾರಿಯ ಸೀರೆ ಕದ್ದ ಚಿತ್ರವನ್ನು ನಿರ್ದೇಶಿಸಿದ್ದ ಪಿ.ಅಣ್ಣಯ್ಯ ಈ ಚಿತ್ರದ ನಿರ್ದೇಶಕರು. ಇದು ಅವರು ನಿರ್ದೇಶಿಸುತ್ತಿರುವ ಆರನೇ ಚಿತ್ರ. ಸಿಂಪಲ್ಲಾಗಿ ಒಂದು ಲವ್ ಸ್ಟೋರಿ, ಬಹುಪರಾಕ್ ಚಿತ್ರಗಳ ಛಾಯಾಗ್ರಾಹಕರಾಗಿರುವ ಮನೋಹರ್ ಜೋಷಿ ಈ ಚಿತ್ರದ ಛಾಯಾಗ್ರಾಹಕರು. ನಿರ್ದೇಶಕರೇ ಕಥೆ ಬರೆದಿರುವ ಈ ಚಿತ್ರಕ್ಕೆ ಉಗ್ರಂ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದ ರಾಮಲಕ್ಷ್ಮಣ ಸಹೋದರರಲ್ಲಿ ಒಬ್ಬರಾದ ಶ್ರೀಲಕ್ಷ್ಮಣ ಅವರು ರಾಜೇಂದ್ರಕುಮಾರ್ ಆರ್ಯ ಅವರೊಟ್ಟಿಗೆ ಚಿತ್ರಕಥೆ ರಚಿಸುತ್ತಿದ್ದಾರೆ. ಸಂಭಾಷಣೆಯನ್ನೂ ಶ್ರೀಲಕ್ಷ್ಮಣ್ ಅವರೇ ಬರೆಯುತ್ತಿದ್ದಾರೆ. ಸುರೇಶ್ ಅರಸ್ ಅವರ ಸಂಕಲನವಿರುವ ಈ ಚಿತ್ರಕ್ಕೆ ಉಳಿದ ತಾರಾಬಳಗ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಯುತ್ತಿದೆ.

ಚಿತ್ರದಲ್ಲಿ ಉಗ್ರಸ್ವರೂಪ ತಾಳುವ ನಾಯಿಯ ಪಾತ್ರ ಕೂಡ ಮುಖ್ಯಾವಾಗಿದ್ದು ನಾಯಿಯ ಶೋಧ ನಡೆಯುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.